Wednesday, October 10, 2012

ಬಡಪಾಯಿ

ಓರ್ವ ಯುವಕ ಬೆಂಗಳೂರಿನ ಒಂದು ಪ್ರಮುಖ ರಸ್ಥೆಯ ಬದಿಯಲ್ಲಿ ನಿಂತಿದ್ದಾನೆ ಅತ್ತಿತ್ತ ನೋಡುತ್ತ ಹತಾಶ ಭಾವದಲ್ಲಿ.ಅವನು ಅನುಭವಿಸಿದ್ದನ್ನು ನೆನೆದು ಅಳು ಬರುವಂತಾಗಿದೆ ಅವನಿಗೆ.ಆದರೆ ಅತ್ತರೆ ಸಮಾಧಾನ ಮಾಡಲು ಯಾರು ಇಲ್ಲವಲ್ಲಾ.

ಮನೆಯ ಬಡತನದ ಪರಿಸ್ಥಿತಿಯಿಂದ, ತನ್ನ ವಿದ್ಯಾಭ್ಯಾಸವನ್ನು ಒಂದು ಹಂತದಲ್ಲೇ ಮೊಟಕುಗೊಳಿಸಿ, ಒಂದು ಉದ್ಯೋಗವನ್ನು ಅರಸಿಕೊಂಡು ಪಟ್ಟಣದ ಹಾದಿ ಹಿಡಿದಿದ್ದನು.

 

 ಬೇಸರದ ಸಂಗತಿಯೆಂದರೆ ಅವನ ಬಸ್ ಖರ್ಚಿಗೂ ಅವನ ತಂದೆ ಬೇರೆಯವರಿಂದ ಸಾಲ ಮಾಡಬೇಕಾದ ಪರಿಸ್ಥಿತಿ, ಹೇಗೋ ಯಾರಿಂದಲೋ ಹಣವನ್ನು ಪಡೆದು ಬೆಂಗಳೂರಿನ ಬಸ್ ಹತ್ತಿದ್ದ ಆತ . ಆ ದಿನವಷ್ಟೇ ಪಟ್ಟಣವನ್ನು ನೋಡಿದ್ದ.!!!!!

ಎಲ್ಲರಿಗೂ ತಿಳಿದ ವಿಷಯವೇ, " ಹಳ್ಳಿ ಮತ್ತು ಪಟ್ಟಣದ ವ್ಯತ್ಯಾಸ ಅಂದರೆ ಇಂಡಿಯಾ ಮತ್ತು ಭಾರತದ ವ್ಯತ್ಯಾಸದಂತೆ !" (ಈ ಮಾತು ಎಲ್ಲೋ ಓದಿದ್ದೆ ನಾನು), ಯಾರೋ ಹೇಳಿದ್ದರು ಅವನಿಗೆ ಒಂದು ಉದ್ಯೋಗದ ಬಗ್ಗೆ .ಆದ್ದರಿಂದಲೇ ಗಡಿಬಿಡಿಯಲ್ಲಿ ಬಂದಿದ್ದನವ. 

 

ಅವನಿಗೆ ಬಹಳ ಪರಿಚಿತರು ಬೆಂಗಳೂರಿನಲ್ಲಿದ್ದರೂ ಅಂದೇ ಸಂದರ್ಶನ ಇದ್ದುದರಿಂದ ಬಸ್ ಇಳಿದವನೇ ಆ ಸ್ಥಳದ ಬಗ್ಗೆ ಸ್ವಲ್ಪ ವಿಚಾರಿಸಿಕೊಂಡು ಬಿ.ಎಮ್.ಟಿ.ಸಿ ಬಸ್ ಏರಿದ.

ಕಂಡಕ್ಟರ್ ಕೊಟ್ಟ ಟಿಕೆಟ್ ಪಡೆದು ಒಂದೇ ಕಾಲಿನ ಮೇಲೆ ಬಹಳ ಕಷ್ಟ ಪಟ್ಟು ನಿಂತಾಗ, ಅವನ ದುರಾದೃಷ್ಟಕ್ಕೆ ಯಾವುದೋ ಕಲಾಕಾರ ಅವನ ಪರ್ಸ್ ಹಾರಿಸಿಬಿಟ್ಟಿದ್ದ ! ಇದ್ದ ಸ್ವಲ್ಪ ದುಡ್ಡೂ ಮತ್ತು ಎಲ್ಲಾ ವಿಳಾಸ ಬರೆದಿದ್ದ ಒಂದು ಸಣ್ಣ ಡೈರಿ ಎಲ್ಲವೂ ಇಲ್ಲವಾಗಿತ್ತು.

 

 ಎಲ್ಲೋ ಒಂದುಕಡೆ ಇಳಿದಾಗ ಅವನಿಗೆ ಈ ವಿಷಯ ಗೊತ್ತಾಯಿತು.ಅಪರಿಚಿತ ಸ್ಥಳ, ಕೈಲಿ ಪುಡಿಗಾಸೂ ಇಲ್ಲ ,ಎಲ್ಲಿಗೆ ಹೋಗುವುದು ತಿಳಿಯುತ್ತಿಲ್ಲ. ಯಾರಿಗೂ ಬೇಡವಾದ ಸ್ಥಿತಿಯಿದು.ಬಹಳ ಹಸಿವೆಯೂ ಆಗಿತ್ತವನಿಗೆ.

ಸುಮಾರು ಹೊತ್ತಿನ ನಂತರ ಒಂದು ನಿರ್ಧಾರ ಮಾಡಿದ.ಹೇಗಾದರೂ ಮಾಡಿ ಮೆಜೆಸ್ಟಿಕ್ ಸೇರುವದು, ಹಣೆಬರಹ ಸರಿ ಇದ್ದರೆ ಯಾರಾದರೂ ಪರಿಚಯದವರು ಸಿಗಬಹುದು ಅಂದುಕೊಂಡು ಬಸ್ಸಿಗೆ ಕಾಯುತ್ತಾ ನಿಂತ ಒಂದು ಕ್ರಾಸಿನ ಹತ್ತಿರ.

 

 ಆದರೆ ನಿಂತು ಬಹಳ ಸಮಯವಾದರೂ ಒಂದೂ ಬಸ್ ಬರಲಿಲ್ಲ ಮೆಜೆಸ್ಟಿಕ್ಕಿಗೆ ! ಬಹಳಶ್ಟು ಬಸ್ ಹೋದರೂ ಸಹ. ಒಂದು ಕಡೆ ಹಸಿವೆಯಾಗಿ ತಲೆ ಸುತ್ತುವ ಪರಿಸ್ಥಿತಿ,ಇನ್ನೊಂದು ಕಡೆ ಬಸ್ ಬರುತ್ತಿಲ್ಲ , ಹೇ ದೇವಾ ಏನಿದು ನಿನ್ನ ಲೀಲೆ ಅಂದುಕೊಂಡ.ಯಾರನ್ನೂ ನಂಬುವ ಸ್ಥಿತಿಯೂ ಇಲ್ಲ,ಅಷ್ಟು ಹೆದರಿಕೆಯಾಗಿತ್ತು ಅವನಿಗೆ ಜನರ ಬಗ್ಗೆ.

ಮನಸ್ಸು ಹೆದರಿದರೂ ಹೊಟ್ಟೆ ಕೇಳಬೇಕಲ್ಲಾ ! ಕೇಳಿದ ಅಲ್ಲೇ ಇದ್ದ ಒಂದು ಅಂಗಡಿಯಾತನನ್ನು " ಸಾರ್ , ಮೆಜೆಸ್ಟಿಕ್ಕಿಗೆ ಹೋಗುವ ಬಸ್ ಯಾವಾಗ ಬರುತ್ತೆ ". ಅಂಗಡಿಯಾತ ಅವನ ಬುಡದಿಂದ ತಲೆಯವರೆಗೆ ನೋಡಿ "ಯೋ, ಯಾವನಯ್ಯಾ ಇವ್ನು,ಆವಾಗಿಂದ ನೋಡ್ತಾ ಇವ್ನಿ, ಎಲ್ಲಾ ಬಸ್ ನೋಡ್ತಿಯಾ,ಆದ್ರೆ ಹೋಯ್ತಾ ಇಲ್ಲಾ, ಅಷ್ಟೊಂದು ಬಸ್ ಹೋದ್ವು ! " ಅಂದಾಗ ಇವನಿಗೆ ಆಶ್ಚರ್ಯ!!!

 

 "ಇಲ್ಲಾ ಸಾರ್,ಒಂದೂ ಹೋಗಿಲ್ಲ ,ಮೆಜೆಸ್ಟಿಕ್ಕಿಗೆ ,ಎಲ್ಲಾ ಬೇರೆದೇ ಬೋರ್ಡ್ ಇತ್ತು " ಅಂದರೆ ಅಂಗಡಿಯವ "ಹಾಹಾ,ಇಲ್ಲಿಗೆ ಹೊಸಬನೇನೋ, ಎಲ್ಲಿಂದ ಬರ್ತಿರಪ್ಪಾ, ಥೂ ಹಳ್ಳಿ ಗಮಾರರು, ನೋಡಿದ್ರೆ ವಿದ್ಯಾವಂತನ ತರ ಇದಿಯಾ !! ಯೋ, ಮೆಜೆಸ್ಟಿಕ್ಕೂ ,ಕೆಂಪೇಗೌಡ ಬಸ್ ನಿಲ್ದಾಣ ಒಂದೇ ಕಣ್ಲಾ ! " ಅಂದ ಕೂಡಲೇ ಈ ಹುಡುಗ ತಲೆ ಸುತ್ತಿ ಅಲ್ಲೇ ಕುಸಿದ !!!!

Thursday, October 4, 2012

ನನ್ನ ಶಣ್ಣ ಕನಸು

ಸಣ್ಣಕ್ಕಿರುವಾಗ ಅಪ್ಪನಾಂಗೆ ಅಪ್ಪು ಕನಸು

ಆದ್ರೆ ಅಪ್ಪ ಹೊಡ್ದ್ರೆ ಅಪ್ಪ ಭೂತಾನಾಂಗೆ ಕಾಂಬ ಕನಸು


ಬಾಲವಾಡಿಯಲ್ಲಿ ಎಲ್ಲ ಕಲತೇ ಬುಡೋ ಕನಸು


ಐಸ್ ಕ್ಯಾಂಡಿ ಮಾರುಲೆ ಬಪ್ಪು ವಯ್ಯನ್ ನೋಡ್ಕಂಡು ಅವ್ನಾಂಗೆ ಸೈಕಲ್ ಮೇಲೆ ಎಲ್ಲಾ ಊರು ಓಡಾಡಿ ಸಣ್ಣ ಮಕ್ಕೋಕೆ ಖುಶಿ ಪಡ್ಸುವ ಕನಸು


ಹಾಂಗೇ ಚೂರು ದೊಡ್ಡಾಗಿ ಕನ್ನಡ ಶಾಲೆ ಸೇರ್ದಾಗ ಮಾಸ್ತರ್ರು ಕೈ ಮೇಲೆ ಪೆಟ್ಟು ಕೊಡಕರೆ ಮಾಸ್ತರ್ರೇ ಆಗವು ಎಂಬ ಕನಸು


ಹಾಂಗೇ ಚೂರು ದೊಡ್ಡಾದ್ಕೂಡ್ಲೆ ಬಂತಲಿ,ಮೂರ್ಖರ ಪೆಟ್ಟಿಗೆ,ಅದರ್ರ್ಲಿ ಬರೋ ರಾಮಾಯಣ, ಮಹಾಭಾರತ ನೋಡ್ಕಂಡು ಎಲ್ಲಾ ಪಾತ್ರನು ನಾನೆ ಎಂಬಾ ಕನಸು


ಯಕ್ಷಗಾನ ನೋಡ್ಕಂಡು ಆ ಹಾಡು ಕೆಟ್ಟ ಸ್ವರದಲ್ಲಿ ಹಾಡ್ತಾ, ಲಯವಿಲ್ಲದ ನರ್ತನ ಮಾಡ್ತಾ ,ಯಕ್ಷಗಾನ ಕಲಾವಿದನೇ ಆಗ್ತೆ ಎಂಬ ಕನಸು


ಊರಲ್ಲಿ ಅಪ್ಪು ನಾಟಕ ನೋಡ್ಕಂಡು ನಾಟಕದ ಪಾತ್ರಧಾರಿ ಆಗೇ ತೀರ್ತೆ ಅಂಬ ಕನಸು


ಆದ್ರೆ ನಾಟಕದಲ್ಲಿ ಮೊದಲ ಬಾರಿ ಬಣ್ಣ ಹಚ್ಕಂಡು ರಂಗದ ಮೇಲೆ ಹೋದ್ರೆ ಆ ಲೈಟು ಎದುರ್ಗಡೆ ಇಪ್ಪು ಜನರನ್ನ ಕಂಡಕಂಡು ಎಲ್ಲಾ ಟುಸ್ಸು ಟುಸ್ಸು


ಕನ್ನಡ ಶಾಲೆಲಿ ಹೆಡೆಪೆಂಟೆ ಬ್ಯಾಟಲ್ಲಿ ಕ್ರಿಕೆಟ್ ಆಡುಲೆ ಶುರು ಮಾಡ್ದಾಗ ಟಿ.ವಿ ಲಿ ನೋಡಿದ ಕಪಿಲ್ ದೇವ ಶ್ರೀಕಾಂತನಾಂಗೆ ನಾನು ಭಾರತಕ್ಕೆ ಆಡ್ತಾ ಇದ್ದೆ ಅಂಬ ಕನಸು


ಮರ ಹತ್ತಿದ ಗೌಡ ಒಂದು ಅಡಿಕೆ ಮರದಿಂದ ಇನ್ನೊಂದು ಅಡಿಕೆ ಮರಕ್ಕೆ ಜೋತ್ ಬೀಳಕರೆ ನಾನು ಮುಂದೊಂದು ದಿನಾ ಅಡಿಕೆ ಕೊಯ್ತೆ ಹೇಳೋ ಕನಸು


ಬಸ್ ಬಂದ್ರೆ ಬಸ್ ಡ್ರೈವರ್ರು ನಾನೆ ಎಂಬ ಕನಸು ಕಂಡಕ್ಟರ್ ಆದ್ರೆ ಎಲ್ಲರ ಮೇಲೂ ಅಧಿಕಾರ ಚಲಾಯ್ಸಲಕ್ಕು ಹೇಳಿ ಕಂಡಕ್ಟರ್ರೇ ಆಗ್ಬುಟ್ಟೆ ಎಂಬ ಕನಸು


ಅಪ್ಪ ಸೈಕಲ್ ಓಡ್ಸಕರೆ ಛೆ ಇದೆಂತ, ನಂಗ ಸಿಕ್ಕಿರೆ ನಾ ಹೆಂಗ್ ಓಡ್ಸ್ತಿದ್ದೆ ಎಂಬಾ ಕನಸು


ಹಾಯ್ ಸ್ಕೂಲ್ ಸೇರಿದ್ ಕೂಡ್ಲೆ ಅಪ್ಪನ ಎಮ್ 80 ಮತ್ತೊಂದು ಬಹು ದೊಡ್ಡ ಕನಸು


ಗಣಿತದ ಮಾಸ್ತರರಂತೆ ದಪ್ಪ ಮೀಸೆ ಬಂತೆಂಬ ಕನಸು


ಮುಂಬೈನಿಂದ ಬಂದವರು ಹೋಗುವಾಗ ಆ ಅದ್ಭುತ ಬಸ್ಸಿನಲಿ ನಾನು ಹೋಗ ಅಂಬ ಕನಸು ದೇಶ ಸುತ್ತೋ ಮನಸು


ಕಾಲೇಜು ಮಣ್ಣು ಹೊರುವಾಗ ಮುಂದಿನ ಜೀವನದ ಬಹು ದೊಡ್ಡ ಕನಸು

ಪಕ್ಕದ ಮನೆಯ ಅಣ್ಣಂಗೆ ಮದುವೆ ಆದ್ರೆ ನನ್ನ ಸಣ್ಣ ಸಂಸಾರದ ಕನಸು ಒಳ್ಳೆಯ ಅರಮನೆ,ಅದರಲ್ಲೊಬ್ಬ ರಾಣಿ,ಎರಡೇ ಎರಡು ಮಕ್ಕಳು, ಕಾರು, ಬೈಕು, ಎಣಿಸಲಾರದಷ್ಟು ಸಂಬಳದ ಉದ್ಯೋಗದ ಕನಸು

ಈಗ ಎಲ್ಲವನ್ನು ಪಡೆದೆ, ಚೋಲೊ ಇಪ್ಪ ಉದ್ಯೋಗ, ಮನೆ, ಮಡದಿ , ಬೈಕು ಕಾರು ಎಲ್ಲವು ನನಸು


ಆದರೆ ಎಲ್ಲಿದೆ ಆ ಕನಸು ,ಕನಸು ನನಸಾದಂತೆ ಅನ್ನಿಸುವಾಗ ಇಪ್ಪ ಖುಶಿ, ಸುಮಾರು ಎಲ್ಲ ಪಡೆದ ಈ ವೇಳೆಯಲ್ಲಿ


ಈಗೆಲ್ಲಿಯ ಕನಸು , ಯೋಚನೆಗಳ ಸರಮಾಲೆಯಲ್ಲಿ ಎಲ್ಲಿ ಆ ಸುಖ ನಿದ್ರೆ, ಬೀಳುವುದೆಂತು ಆ ಕನಸು ?

ನನ್ನ ಸಂಭ್ರಮ ನಿಮ್ಮೊಂದಿಗೆ

ಚೌತಿಯ ಸಂಭ್ರಮ, ಆಫೀಸಿಗೆ ಹೋಗಿ ಬಂದು ಸಂಜೆ ಊರಿಗೆ ಹೋಗಬೇಕೆಂದು ನಿಶ್ಚಯಿಸಿದ್ದೆ,ಗಣಪತಿಯನ್ನು  ಕೂರಿಸುತ್ತಾರೆ ನಮ್ಮ ಮನೆಯಲ್ಲಿ , ಪಾಪ ಅಪ್ಪನೂ ಒಬ್ಬಂಟಿ ,ಅಮ್ಮನಿಗೆ ಅಡಿಗೆಮನೆ ಕೆಲಸವೇ ಜಾಸ್ಥಿ, ಹೋಗಿ ಅಪ್ಪನಿಗೆ ಒಂದಿಷ್ಟು ಸಹಾಯ ಮಾಡುವ ಮನಸ್ಸು.  ಬೆಳಿಗ್ಗೆ ಬೇಗನೆದ್ದು ಎಲ್ಲಾ ತಯಾರಿ ಮಾಡಿಕೊಂಡು , ಹತ್ತು ನಿಮಿಶವಿನ್ನೂ ಇದ್ದುದರಿಂದ ಒಮ್ಮೆ ಫೇಸ್ ಬುಕ್ ನಲ್ಲಿ ಕಣ್ಣಾಡಿಸಿದರೆ ಇಡಗುಂಜಿಯ ಗಣಪನ ಚಿತ್ರ ಪಟ ನೋಡಿ ಬಹಳ ಸಂತೋಷವಾಯಿತು, ಯಾಕೋ ಗೊತ್ತಿಲ್ಲ ಇಡಗುಂಜಿ ಗಣಪನೆಂದರೆ ತುಂಬಾ ಆತ್ಮೀಯ, ನಮ್ಮ ಮನೆಯವನೇ ದೇವರಾಗಿದ್ದಾನೋ ಎಂಬಷ್ಟು !  

     ಈಗಲೇ ಯುದ್ಧಕ್ಕೆ ಹೊರಡುವವನಂತೆ, ಸಕಲ ಆಫೀಸ್  ಪೋಷಾಕು ಧರಿಸುತ್ತಿದ್ದಾಗ ಮೊಬೈಲ್ ಫೋನ್ ತನ್ನ ಬಳಿಗೆ ಕರೆಯಿತು ಕಿರುಚುತ್ತ ! ನೋಡಿದರೆ ನನ್ನ  ಮನದನ್ನೆಯ ಕರೆಯಾಗಿತ್ತು ,ತುಂಬು ಗರ್ಭಿಣಿಯಾದ ಅವಳು ತನ್ನ ತವರು ಮನೆಯಿಂದ ಕರೆ ಮಾಡಿದಾಗ ನಾನಂದೆ  "ಯಾಕೇ ,ನನ್ನ ನೆನಪು ಕಾಡಿತಾ ಬೆಳ್ಳಂಬೆಳಿಗ್ಗೆ" . ಅವಳೆಂದಳು "ಇಲ್ಲಾರಿ  ಸ್ವಲ್ಪ ಲೇಟಾಗಿ ಆಫೀಸಿಗೆ ಹೋಗಿ, ನೀವು ಬರಬೇಕಾಗಬಹುದೇನೋ,ಯಾಕೋ  ನೋವು ಬರ್ತಾ ಇದೆ" ಅಂದಾಗ ಮತ್ತೊಮ್ಮೆ ಈಗಷ್ಟೇ ನೋಡಿದ್ದ ಇಡಗುಂಜಿ ಗಣಪ ನೆನಪಾದನಲ್ಲಾ !  ಅರೆ ಇದೇನಿದು ,ಇನ್ನೊಂದು ವಾರವಿತ್ತು ವೈದ್ಯರು ಕೊಟ್ಟ ಸಮಯ,ಈಗ್ಯಾಕೆ ಇವಳಿಗೆ ನೋವು ಅಂದುಕೊಂಡೆ, ಮತ್ತೆ ಸ್ವಲ್ಪ ಹೊತ್ತಿಗೆ ಇನ್ನೊಂದು ಫೋನ್ ಅವಳಿಂದಲೇ " ಇಲ್ಲಾರೀ ನೋವು ತಡ್ಕೊಳ್ಳೋಕೆ ಆಗ್ತಾ ಇಲ್ಲಾ, ಆಸ್ಪತ್ರೆಗೆ ಹೋಗ್ತಾ ಇದ್ದೇನೆ" ಅಂದಾಗಾ ನನ್ನ ಒಡಲೊಳಗೂ ನೋವಾಯ್ತಲ್ಲಾ! ಗಣಪಾ ನನ್ನವಳಿಗೆ ಪ್ರಸವ ವೇದನೆಯನ್ನು ಸಹಿಸಿಕೊಳ್ಳುವ ಶಕ್ತಿ ಕೊಡು ಎಂದುಕೊಂಡೆ.  ಅವಸರದಲ್ಲಿ ನನ್ನ  ಯುನಿಫಾರ್ಮ್ ಬಿಚ್ಚೆಸೆದು ಸಿಕ್ಕಿದ ಬಟ್ಟೆ ಹಾಕಿಕೊಂಡು ,ಅಫೀಸ್ ಬಾಸಿಗೆ ಒಂದು ಫೋನಾಯಿಸಿ ಕಾರನ್ನೇರಿ ಹೊರಟೆ.

     ದಾರಿಯುದ್ದಕ್ಕೂ ನೆಟ್ ವರ್ಕ್ ಸಿಕ್ಕಿದ ಕೂಡಲೇ ಅಲ್ಲಿಯ ಸಮಾಚಾರ ತಿಳಿಯುತ್ತ ,ನನ್ನ  ಮನೆಯವರಿಗೂ ಸುದ್ದಿ ಮುಟ್ಟಿಸಿದೆ, ಗಣಪತಿಯ ಹೆಸರಲ್ಲಿ ಒಂದು ತೆಂಗಿನಕಾಯಿ ತೆಗೆದಿಡಿ ಎನ್ನುವದನ್ನೂ ಮರೆಯಲಿಲ್ಲ.ಅಪ್ಪ ಅಮ್ಮನೂ ಕೂಡಲೇ ಹೊರಟರು ಬಸ್ಸಿನಲ್ಲಿ ನನ್ನ ಮನೆಯವಳಿರುವ ಊರಿನ ಕಡೆಗೆ. ಅಂತೂ ಇಂತೂ ಹೋಗಿ ಸೇರಿದೆ ಆಸ್ಪತ್ರೆ.ದಾಪುಕಾಲಿಡುತ್ತಾ  ರೂಮಿಗೆ ಹೊಕ್ಕವನಿಗೆ ಕಂಡಿದ್ದೇನು, ವಿಲಿ ವಿಲಿ ಒದ್ದಾಡುತ್ತಿರುವ ಮನೆಯವಳು,ಕೂಗು ಬೇರೆ. ಅಬ್ಬಾ ದೇವರು ಒಂದು ಸಂಭ್ರಮಕ್ಕಾಗಿ ಎಷ್ಟೊಂದು ನೋವನ್ನಿಟ್ಟಿದ್ದಾನೆ ಹೆಣ್ಣಿಗೆ, ಪ್ರಸವದ ಸಂಭ್ರಮ ಒಂದು ಕಡೆ,ಇನ್ನೊಂದು ಕಡೆ ಯಾತನೆ. ಅದಕ್ಕೇ ಇರಬೇಕು ಭಾರತೀಯರು ಹೆಣ್ಣಿಗೆ ಮಾತೆಯ ಸ್ಥಾನ ನೀಡಿರುವದು, ಪೂಜ್ಯನೀಯಳೆಂಬುದು.ಜನನಿ ಅವಳು,ಗಂಡಸರಿಂದ ಸಾಧ್ಯವಾಗದ ಈ ಕಾರ್ಯವನ್ನು ಮಾಡುವವಳು.

ದೈಹಿಕ ಯಾತನೆ ಅವಳದಾದರೆ ನನ್ನದು ಮಾನಸಿಕವಾಗಿ,ನೋಡಲಾಗುತ್ತಿಲ್ಲ ಅವಳನ್ನು, ಕುಣಿದಾಡುತ್ತ ಓಡಾಡುತ್ತಿದ್ದ ಅವಳು ಮಲಗಿ ಒದ್ದಾಡುವದನ್ನು ಕಂಡು ಅಯ್ಯೋ ಅನಿಸಿತು ನನಗೆ.  ಬಂದ ನರ್ಸಮ್ಮ ಯಾಕೆ  ಅಷ್ಟೊಂದು ಕೂಗಾಡುತ್ತೀರಾ , ಎಲ್ಲರಿಗೂ ಆಗುವದೇ ಅಲ್ಲವೇ ಅಂದಾಗ ಬಿಟ್ಟೆ ಕೆಂಗಣ್ಣನ್ನು ನರ್ಸ್ ಎಡೆಗೆ, ನನ್ನ ಮಡದಿ ಒದ್ದಾಡುತ್ತಿದ್ದಾಳೆ  ಇವಳಿಗೇನೂ ಅನ್ನಿಸುತ್ತಿಲ್ಲವಲ್ಲಾ,ಗೊತ್ತಿದ್ದೂ ಹೀಗೆ ಹೇಳುವಳಲ್ಲಾ ಅಂದುಕೊಂಡೆ .ಆದರೆ ಆಗಲೇ ಅನಿಸಿದ್ದು ಪ್ರತಿ ದಿನವೂ ಎಷ್ಟು ಜನರನ್ನು ನೋಡಬಹುದು ಅವಳು, ಎಷ್ಟೊಂದು ಜನರ ಸೇವೆ ಮಾಡಿರಬಹುದು ?ಹೌದು ಕೆಲಸಕ್ಕೋಸ್ಕರ  ಸಂಬಳ ತೆಗೆದು ಕೊಳ್ಳುತ್ತಾಳಾದರೂ ,ಪರಿಚಯವಿಲ್ಲದ ಜನರ ನೋವಿಗಾಗುತ್ತಾಳಲ್ಲಾ.ರೋಗಿಗಳೋ ಗರ್ಭಿಣಿಯರೋ ಯಾವುದೇ ಹೊತ್ತಿನಲ್ಲಿ ಕರೆಯಲಿ ಬಂದು ಅವರು ಕೇಳಿದ್ದು ಮಾಡುತ್ತಾರಲ್ಲಾ .


ನೋವು ಜಾಸ್ಥಿ ಆಗಿದ್ದರಿಂದ ನನ್ನವಳನ್ನು ಡಾಕ್ಟರ್ ರೂಮಿನಿಂದ ಹೆರಿಗೆ ವಾರ್ಡಿಗೆ ಕರೆದುಕೊಂಡು ಹೋದ ನಂತರ , ನಾನು ಒಮ್ಮೆ ಮೊಬೈಲ್ ನೋಡುತ್ತಿದ್ದೆ ,ಒಮ್ಮೆ ವಾಚು ,ಎರಡೂ ಒಂದೇ ಸಮಯ ತೋರಿಸುತ್ತಿದ್ದವು, ಒಂದೊಂದೇ ನಿಮಿಷ ಜಾಸ್ಥಿ ಆಗುತ್ತಿತ್ತು,ನನ್ನ ಒಳಗೆ ಚಡಪಡಿಕೆ.ನನ್ನವಳ ಅಪ್ಪ ಅಮ್ಮ ಮತ್ತಿಬ್ಬರು ನೆಂಟರ ಕುತೂಹಲಭರಿತ ನೋಟ,ಒಮ್ಮೆ ನನ್ನನ್ನೂ , ಇನ್ನೊಮ್ಮೆ ಮುಚ್ಚಿದ ವಾರ್ಡಿನ ಬಾಗಿಲನ್ನೂ ನೋಡುತ್ತ ಅವರೊಳಗೇ ಚರ್ಚೆ ನಡೆಯುತ್ತಿತ್ತು ,ಹಿಂದಿನ ಹೆರಿಗೆ ಸಂಭ್ರಮಗಳ ಬಗ್ಗೆ !          ಮೌನಿಯಾಗಿ , ಎಲ್ಲೋ ಇದ್ದ ನನ್ನ ಮಾತಾಡಿಸುವ ಸಾಹಸ ಅವರದ್ದು, ಅಲ್ಲಿ ನನ್ನವಳು ಒದ್ದಾಡುತ್ತಿರುವಾಗ ನಾ ಹೇಗೆ ಹರಟೆ ಹೊಡೆಯಲಿ,ನನಗೆ ಬೇಕಿತ್ತು ಮೌನ,ಏಕಾಂತ .

ಸಮಯ ಭಾರವಾಗಿ ಹೆಜ್ಜೆ ಹಾಕುತ್ತಿರುವಾಗ ನಾನೂ ಹೆಜ್ಜೆಯನ್ನಿಟ್ಟೆ ಆಸ್ಪತ್ರೆಯ ಮೆಟ್ಟಿಲಿನೆಡೆಗೆ, ಮೆಟ್ಟಿಲಿಳಿವಾಗ  ಅಲ್ಲಿಯೂ ಕಂಡಿದ್ದು ನನ್ನ ಗಣಪನ ಒಂದು ಸುಂದರ ಮೂರ್ತಿ, ಹೆದರಿದಿರು ಮಂಕೇ ,ನಾನಿದ್ದೇನೆ ಎಂದು ಮುಗುಳ್ನಗುತ್ತ ನನಗೆ ಸಾಂತ್ವನ ಹೇಳಿದಂತಿತ್ತು ಅವನ ನೋಟ. ಅವನನ್ನೇ ದ್ರಷ್ಟಿಸುತ್ತಾ ಅಲ್ಲಿಯೇ ನಿಂತೆ ಸುಮಾರು ಹೊತ್ತು, ಯಾಕೋ ಈಗ ಸಮಯ ವೇಗವಾಗಿ ಸಾಗತೊಡಗಿತು !

ಅದೇ ಸಮಯದಲ್ಲಿ ಹೆರಿಗೆ  ವಾರ್ಡಿನ ಬಾಗಿಲು ತೆರೆಯಿತು, ಎಲ್ಲರೂ ಅತ್ತ ಧಾವಿಸಿದೆವು.ಒಬ್ಬಳು ನರ್ಸಮ್ಮ ಹೊರ ಬಂದವಳೇ , ಆತಂಕ ಬೇಡ, ಆರಾಮಾಗಿದ್ದಾರೆ ಎಂದಳು. ಆರಾಮಿಗಿದ್ದಾರೆ ಅದು ಸರಿ,ಆದರೆ ಯಾರು ಯಾರು ಎಂಬ ಕುತೂಹಲ.ನಾನಂತೂ ಮೌನಿಯಾಗಿದ್ದೆ, ನನ್ನ ಮನೆಯವಳ ತಾಯಿಗೆ ತಡೆಯಲಾಗಲಿಲ್ಲ, ಕೇಳಿದಳು ನರ್ಸಮ್ಮನನ್ನ , ಹೆರಿಗೆ ಆಯಿತೇ, ಹೆರಿಗೆ ಆದರೆ ಕಂದಮ್ಮ  ಹೇಗಿದೆ,ಗಂಡೋ ಹೆಣ್ಣೋ  ?

ನನ್ನ ಮತ್ತು ನನ್ನ ಮನೆಯವಳ ಇಬ್ಬರ ಭಾವನೆಯಲ್ಲೂ ಗಂಡಾಗಲಿ ಹೆಣ್ಣಾಗಲಿ ,ಹುಟ್ಟುವ ಕೂಸು ಆರೋಗ್ಯವಂತನಾಗಿದ್ದರೆ ಆಯಿತು . ಹೆಣ್ಣಾದರೆ ಒಂದು ಚಂದ,ಗಂಡಾದರೆ ಇನ್ನೊಂದು ಬಗೆಯದ್ದು., ಯಾವುದಾದರೂ ಸಂತಸವೆಂಬ ಬಯಕೆ.

ಹೀಗಿರುವಾಗ ನರ್ಸಮ್ಮ ಎಂದಳು , ಗಂಡು ಮಗು ಜನಿಸಿದೆ ಎಂದು,ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದಾಗ ಅಲ್ಲಿದ್ದ ಎಲ್ಲರಲ್ಲೂ ಸಂಭ್ರಮ,ಖುಶಿಯೋ ಖುಶಿ.ಅಜ್ಜನ ಸಂಭ್ರಮ, ಅಜ್ಜಿಯ ಸಡಗರ.  ಬಹು ದಿನದ ನಂತರ ಅಜ್ಜ ಅಜ್ಜಿ ಆದ ಅವರ ಆನಂದಕ್ಕೆ ಪಾರವೇ ಇಲ್ಲ , ಆದರೆ ನನಗೆ ?

ಯಾಕೋ ಗೊತ್ತಿಲ್ಲೆ, ಆ ಸಮಯದಲ್ಲಿ ನನ್ನಲ್ಲಿನ ಭಾವ ಯಾವುದು ಎಂಬುದನ್ನು ವಿವರಿಸುವದು ಕಷ್ಟ, ಅವಸರದಲ್ಲಿ ಓಡಿ ಹೋಗಿ, ಸಿಕ್ಕ ಬಾತ್ ರೂಮನ್ನು ಹೊಕ್ಕು ಕದ ಜಡಿದೆ, ಕಣ್ಣೀರ ಧಾರೆ ಉಕ್ಕಿತ್ತು , ಸಂಭ್ರಮದ ,ಖುಶಿಯ ಕಣ್ಣೀರೋ ಗೊತ್ತಿಲ್ಲ,ಆದರೆ ಸುಮಾರು ಹೊತ್ತು ತಡೆಯಲಾಗದಷ್ಟು ಬಿಕ್ಕಳಿಕೆ.ನೀರೆರೆಚಿಕೊಂಡು, ಒರೆಸಿಕೊಂದೆ ಮುಖವನ್ನು. ಹೊರಗೆ ಬಂದು ಎಲ್ಲರ ಸಂಭ್ರಮದಲ್ಲಿ ನಾನೂ ಭಾಗಿಯಾದೆ. ಆಗ ಒಂದು ಸಮಾಧಾನ, ಅಂತೂ ನಾನೂ ಅಪ್ಪನಾದೆ ಎಂದು. ಈ ವಿಷಯವನ್ನು ಬಸ್ಸಿನಲ್ಲಿ ಬರುತ್ತಿರುವ ನನ್ನ ಹೆತ್ತಮ್ಮನಿಗೆ ಹೇಳುವ ಆಸೆಯಿಂದ ಮೊಬೈಲ್ ನಂಬರ್ ಒತ್ತಿದೆ, ಆದರೆ ಬೇಕಾದಾಗಲೆಲ್ಲಾ ಹೇಗೆ ಸಿಕ್ಕೀತು ಆ ನೆಟ್ ವರ್ಕ್ , ಬೇಸರ ವಾಯಿತು, ಇರಲಿ ಆಮೇಲೆ ಹೇಳಿದರಾಯಿತು ಎಂದುಕೊಂಡು,  ತಂಗಿಗೆ ಫೋನ್ ಮಾಡಿ ವಿಷಯ ತಿಳಿಸುವಾಗಲೂ ಮತ್ತೆ ಗಂಟಲು ಕಟ್ಟಿತ್ತಲ್ಲಾ! ದೊಡ್ಡಮ್ಮ ಬೆಳಗಿನಿಂದಲೂ  ಸುಮಾರು ಸಲ ವಿಚಾರಿಸಿದ್ದಳು ಇಲ್ಲಿನ ಬಗ್ಗೆ,ಅವಳಿಗೆ ಕರೆ ಮಾಡಿದಾಗ "ಏನಾಯ್ತೋ ಮಗನೇ, ಸಿಹಿ ಸುದ್ದಿ ಇದೆಯೋ " ಅಂದಾಗ " ದೊಡ್ಡಮ್ಮ ,ಅಂತೂ ಅಪ್ಪನಾದೆ " ಅಷ್ಟೆ ನನ್ನ ಬಾಯಿಂದ ಬಂದಿದ್ದು. ಮುಂದೆ ಮಾತು ಹೊರ‍ಡಲು ನನ್ನ ಗಂಟಲು ಸಹಕರಿಸಲಿಲ್ಲ. ದೊಡ್ಡಮ್ಮ ನನ್ನ ಹೆತ್ತಮ್ಮನಿದ್ದಂತೆ.

ಆಮೇಲೆ ಸುಧಾರಿಸಿಕೊಂಡು ಎಲ್ಲರಿಗೂ ವಿಷಯ ಮುಟ್ಟಿಸಿದೆ. ಅಷ್ಟೇ ಹೊತ್ತಿನಲ್ಲಿ ನನ್ನ ಮಗ ,ನನ್ನ ಪ್ರಥಮ ಕುಮಾರನನ್ನು ಎತ್ತಿಕೊಂಡು ನರ್ಸಮ್ಮ ಬಂದಳು, ಅಲ್ಲಿ ಇದ್ದವರಿಗೆ ಖುಶಿ,ಅರೆ ಚಂದ ಇದೆಯಲ್ಲಾ ಮಗು ಎಂದು, ಯಾರ ಹಾಗಿರಬಹುದು,ಅಪ್ಪನ ಹೋಲಿಕೆಯೋ,ಅಮ್ಮನದ್ದೋ ಎಂಬ ಚರ್ಚೆ.ಬಹಳಷ್ಟು ಜನ ಇದೇ ಪ್ರಷ್ನೆ ಕೇಳುತ್ತಾರೆ,ಆದರೆ ನನಗೆ ಯಾವಾಗಲೂ ಗೊತ್ತಾಗುವುದಿಲ್ಲ ಅದೂ ಪ್ರಥಮ ದಿನವೇ ಹೇಗೆ ಹೇಳಲು ಸಾಧ್ಯ. ಗೊತ್ತಾಗದ ನಾನು ಮತ್ತು ನನ್ನ ಹಸುಗೂಸು ಸುಮ್ಮನಿದ್ದೆವು !  ಆ ನನ್ನ ಕಂದ ನನ್ನನ್ನೇ ದ್ರಷ್ಟಿಸಿ ಅಪ್ಪಾ  ಅಂದ ಹಾಗೆ ಅನ್ನಿಸಿತು. ಅರೆ ಇಂದಿನಿಂದ ನಾನು ಒಬ್ಬ ಉಂಡಾಡಿ ಗುಂಡನಲ್ಲ. ನನ್ನ ಕರುಳಿನ ಕುಡಿಯ ಪೋಷಕ ಎಂಬ ಭಾವ. ಮನಸ್ಸಿನಲ್ಲೇ ಅಂದುಕೊಂಡೆ " ಮಗನೇ,ಈ ಭುವಿಗೆ ನಿನಗೆ ಸ್ವಾಗತ,ನಿನ್ನ ತಂದೆ ಕಣೋ ನಾನು,ನಿನ್ನ ಮುಂದಿನ ಪಾಲಕ,ಗೆಳೆಯ, ಪ್ರೋತ್ಸಾಹಕ, ನಾನು ನಿನಗೆ ಮೊದಲ ಉಡುಗೊರೆ ಕೊಟ್ಟೆದ್ದೇನೋ,  ಕಣ್ಣೀರ ಹನಿಗಳನ್ನು"

ಹಿಂದೆಯೆ ನನ್ನ ಮಡದಿ, ಪ್ರಥಮ ಪ್ರಸವವಾದ ಸಂಭ್ರಮದೊಂದಿಗೆ ರೂಮಿಗೆ ಬಂದಾಗ ಒಂದು ಹೂಮುತ್ತನ್ನಿಟ್ಟೆ ಅವಳ ಹಣೆಯ ಮೇಲೆ. ಮನಸ್ಸಿನಲ್ಲೇ ಒಂದು ಧನ್ಯವಾದವನ್ನೂ ಕೊಟ್ಟೆ , ನನ್ನ ಬಾಳಿಗೆ ಒಂದು ಅರ್ಥವನ್ನು ಕೊಟ್ಟಿದ್ದಕ್ಕೆ.ಬೆಳಿಗ್ಗೆಯಿಂದ ಒದ್ದಾಡಿದವಳು ಇವಳೇನೋ ಅನ್ನಿಸಿತು, ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಕೂಗಿದ್ದು ಮರೆತೇ ಹೋಗಿದ್ದಳವಳು.ಮಂದಹಾಸ ಅವಳ ಮುಖವನ್ನು ತುಂಬಿತ್ತು. ಅಮ್ಮನಾದ ಧನ್ಯತೆ ಇತ್ತು.ಅವಳನ್ನು ಮಾತಾಡಿಸಿ ,ಪಕ್ಕದಲ್ಲೇ ಮಲಗಿ ಬಾಯಿ ಆಡಿಸುತ್ತಿದ್ದ ನನ್ನ ಕಂದಮ್ಮನನ್ನು ದಿಟ್ಟಿಸತೊಡಗಿದೆ, ಎಷ್ಟು ನೋಡಿದರೂ ಕಡಿಮೆ,ನೋಡುತ್ತಲೇ ಇರಬೇಕೆಂಬ ಬಯಕೆ, ಅವನ ರೂಪವನ್ನು ಕಣ್ತುಂಬಿಸಿಕೊಳ್ಳುವ ಆಸೆ, ನನ್ನವಳು ಕೈ ಚಿವುಟಿದಳು ! ಸಾಕು ನೋಡಿದ್ದು, ಅಪ್ಪ ಅಮ್ಮನದ್ದೇ  ದ್ರಷ್ಟಿ ತಾಗುತ್ತಂತೆ ಹಸಿಗೂಸಿಗೆ ಎಂದಾಗ ಎಲಾ ಇವಳಾ ,ತನಗೆ ನೋಡಲಿಕ್ಕೆ ಆಗ್ತಾ ಇಲ್ಲಾ  ಎದ್ದು ಕೂತು ಅದಿಕ್ಕೆ ನನ್ನನ್ನೂ ನೋಡುವುದು ಬೇಡ ಅನ್ನುತ್ತಿರಬಹುದು ಅಂದುಕೊಂಡೆ.ಮನಸ್ಸಿನಲ್ಲಿ ಬೈದುಕೊಂಡರೂ ನನ್ನವಳನ್ನು ನೋಡುಲು ಆನಂದವಾಗುತ್ತಿತ್ತು ನನಗೆ, ಮಾತ್ರತ್ವ ಪಡೆದ ಪ್ರಸನ್ನ ಭಾವ ಇತ್ತು ಅವಳಲ್ಲಿ. 


ಅಷ್ಟರಲ್ಲೇ ನನ್ನ ಅಪ್ಪ ಅಮ್ಮನ ಆಗಮನ. ಅಜ್ಜ ಅಜ್ಜಿಯಾದ ಸಂಭ್ರಮ. ಆನಂದಮಯ ಆ ಸಮಯ. ಅವರಿಗೆ ಅತ್ಯಂತ ದೊಡ್ಡ ಘಳಿಗೆ. ತಮಗೇ  ಮಗುವಾದಾಗಲೂ ಇಷ್ಟು ಸಂಭ್ರಮವಿತ್ತೋ ಇಲ್ಲವೋ,ಆದರೆ ಮಗನ ಮಗನನ್ನು ನೋಡಿ ಅವರ ಬಾಲ್ಯ ಮರುಕಳಿಸಿತ್ತು. ಮೊಮ್ಮಗುವನ್ನು ನೋಡುವ ಹೊತ್ತಿನಲ್ಲಿ ಪಕ್ಕದಲ್ಲೇ ನಿಂತಿದ್ದ ಮಗನನ್ನೂ ಮರೆತಿದ್ದರವರು. ಸ್ವಲ್ಪ ಹೊತ್ತಿನ ನಂತರ ಅಪ್ಪ . ತಮ್ಮಾ ಅಂತೂ ಅಪ್ಪನಾದೆ ಎಂದು ಬಿಗಿದಪ್ಪಿಕೊಂಡಾಗ ನಾನು ಮನಸ್ಸಿನಲ್ಲಿ ಅಂದುಕೊಂಡೆ " ಹೌದು ಅಪ್ಪಾ ,ಚಿಕ್ಕವನಾಗಿದ್ದಾಗ  ನಿನ್ನಂತೆ ಆಗಬೇಕೆಂದುಕೊಂಡಿದ್ದೆ,ತಡವಾದರೂ ಈಗ ಆದೆನಾ ಅಪ್ಪ. ನನ್ನ ಜವಾಬ್ದಾರಿಗಳ ಸರಣಿಗೆ ಮಗುವೆಂಬ ಇನ್ನೊಂದು ಜವಾಬ್ದಾರಿ ಸೇರ್ಪಡೆಯಾಯಿತು"

ರಾತ್ರಿ ಆಸ್ಪತ್ರೆಯಲ್ಲಿ ಇಬ್ಬರೂ ಅಜ್ಜಿಯಂದಿರು ಇರುವುದೆಂದು ನಿರ್ಧಾರವಾಯಿತು,ಬಾಕಿಯವರನ್ನು ಕಳುಹಿಬಂದೆ.ಆಮೇಲೆ ಊಟ ಮುಗಿಸಿ ಅಮ್ಮನನ್ನು ಕರೆದುಕೊಂಡು ಹೋಗುವಾಗ ಅಮ್ಮನೆಂದಳು " ತಮ್ಮಾ ,ನೀನು ಬರುತ್ತೀಯೆಂದು ಚಕ್ಕಲಿ ,ವಡೆ ಮಾಡಿದ್ದೆ,ನೋಡಿದ್ರೆ ಈಗ ಹಬ್ಬವೂ ಇಲ್ಲ, ನೀನೂ ಬರುವುದಿಲ್ಲ ಮನೆಗೆ,ಇಲ್ಲಿಂದನೇ ಆಫೀಸಿಗೆ ಹೋಗ್ತಿನಿ ಅಂತಿದಿಯಾ!!!"  ಇದೇನಪ್ಪಾ,ನನ್ನಮ್ಮನ ಯೋಚನೆ. ನನಗೆ ಮಗು ಮಲಗಿರಬಹುದೆ, ಅಳುತ್ತಿರಬಹುದೇ ಎಂಬ ಚಿಂತೆಯಾದರೆ ,ಇವಳಿಗೆ ವಡೆ ಚಕ್ಕುಲಿಯ ಚಿಂತೆ ಆಯಿತಲ್ಲಾ.  ಆದರೆ ಅವಳ ಭಾವನೆ ತಪ್ಪಲ್ಲವಲ್ಲಾ. ಯಾಕೆಂದರೆ ಅಮ್ಮ ಮಾಡುವದು ತನಗಾಗಿ ಅಲ್ಲ ತನ್ನ ಮಕ್ಕಳಿಗಾಗಿ.ಆದರೆ ಪಾಪ ತನ್ನ ಮಗ ತಿನ್ನಲು ಬರುವುದಿಲ್ಲವಲ್ಲಾ ಎಂಬ ಸಂಕಟ. ನಾನು ಬರೀ ಒಂದು ದಿನದ ಪಿತ,ಅಷ್ಟರಲ್ಲೇ ನನ್ನ ಮಗನ ಬಗ್ಗೆ ಚಿಂತೆ, ಆದರೆ  ಅವಳೋ ಬಹಳಷ್ಟು ವರ್ಷಗಳಿಂದ ನನ್ನ ಅಮ್ಮ.

ಆಯಿತಮ್ಮಾ ,ನೋಡ್ತಿನಿ ಸಾಧ್ಯ ಆದರೆ ಬರ್ತೇನೆ ಎಂದೆ.
ರಾತ್ರಿ ಗಂದಸರು ಇರಗೊಡುವದಿಲ್ಲ ಆಸ್ಪತ್ರೆಯಲ್ಲಿ, ಆದ್ದರಿಂದ ಮತ್ತೊಮ್ಮೆ ನಿದ್ರಿಸುತ್ತಿದ್ದ ಮಗನ  ಮುಖವನ್ನು ನೋಡಿ ಹೊರಟವನಿಗೆ , ಮತ್ತೆ ನೆನಪಾಗಿದ್ದು ಗಣಪ, ನಮ್ಮ ಗಣಪ !

ನಾ ನಂಬಿದ ದೇವರು ಅವನ ಅಮ್ಮನ ದಿನದಂದು ,ನನಗೆ ಉಡುಗೊರೆಯನ್ನಿತ್ತನಲ್ಲಾ ಎಂದು ಗಣಪನಿಗೆ ಮನಸ್ಸಿನಲ್ಲೇ ಒಂದು ಧನ್ಯವಾದವನ್ನು ಕೊಟ್ಟೆ.ಆಸ್ಪತ್ರೆಯಲ್ಲೇ ಇದ್ದ ಅವನ ಮೂರ್ತಿಗೆ ಕೈ ಮುಗಿದೆ. ಮಣ್ಣಿನ ರೂಪದಲ್ಲಿ ಚೌತಿಯಂದು ನಮ್ಮ ಮನೆಗೆ ಬರುವ ಗಣಪ , ಈಗ ನನಗೊಂದು ಅವನ ರೂಪವನ್ನೇ ಕೊಟ್ಟನೋ ಅಂದುಕೊಂಡು ಮುಗುಳ್ನಕ್ಕೆ.

             *******************************************************

ಆಸ್ಪತ್ರೆಯಲ್ಲಿದ್ದೇನೆ ನನ್ನ ಪುಟ್ಟ ಸಂಸಾರದೊಟ್ಟಿಗೆ,ನನ್ನ ಕಂದನೊಂದಿಗೆ,ಅಬ್ಬಾ ಅವನೋ ತನ್ನ ಪುಟ್ಟ ಪುಟ್ಟ ಕಣ್ಣುಗಳನ್ನು ಮಿಟುಕಿಸುತ್ತ ಏನನ್ನೋ ಹುಡುಕುವ ಯತ್ನದಲ್ಲಿದ್ದಾನೆ,ಯಾರನ್ನು ಹುಡುಕುತ್ತಿರಬಹುದು,ಏನನ್ನು ಹುಡುಕುತ್ತಿರಬಹುದು,ನಾನೂ ನೋಡದ ಜಗತ್ತು ಅವನಿಗೆ ಗೊತ್ತಿರಬಹುದೇ ಎಂಬ ಶಂಕೆ ನನಗೆ.ಈಗಲೇ ಇವನ ಆಲೋಚನಾ ಸರಣಿ ಪ್ರಾರಂಭವಾಗಿದೆ ಎಂಬಂತೆ ಗಲ್ಲಕ್ಕೆ ತನ್ನ ಪುಟ್ಟ ಕೈಯನ್ನು ಕೊಟ್ಟು ಏನೋ ಯೋಚಿಸುತ್ತಿದ್ದಾನಲ್ಲ,ಮಲಗಿದಾಗಲೂ ಅದೇ ಭಂಗಿ.ಯಾಕೋ ಗೊತ್ತಿಲ್ಲ, ಒಮ್ಮೊಮ್ಮೆ ಎರಡೂ ಕೈಗಳನ್ನು ಆಶೀರ್ವದಿಸುವಂತೆ ಇಟ್ಟುಕೊಳ್ಳುವನಲ್ಲಾ ! ಅಸೆಯಾಗುತ್ತಿದೆ ಒಮ್ಮೆ ಕೈ ಮುಗಿದು ಬಿಡೋಣ ಎಂದು. ಆದರೆ ಬಾಕಿ ಜನರನ್ನು ನೋಡಿ ನನ್ನನ್ನು ನಾನೇ ನಿಯಂತ್ರಿಸಿಕೊಳ್ಳುವೆ, ಹಸುಗೂಸು ದೇವರ ಸಮಾನ ಎನ್ನುವರು ಹಿರಿಯರು,ತಪ್ಪೇನಿಲ್ಲ ನಮನ ಸಲ್ಲಿಸಲು ಅಂದುಕೊಂಡೆ. ಆಗಾಗ ಕಿರುಚಾಟ, ಮತ್ತೆ ಕಿರು ನಿದ್ರೆ, ಏನೇ ಮಾಡಿದರೂ ಒಂದು ಸುಂದರತೆ. ಮುಗ್ಧತೆ,ಈ ಮುಗ್ಧ ಜೀವಿಗೆ ಮುಂದೆ ತುಂಬುವುದಿದೆಯಲ್ಲಾ ಎಲ್ಲಾ ವಿಷಯಗಳನ್ನು.
ಬಹಳಷ್ಟು ನೆಂಟರಿಷ್ಟರೂ ಬಂದಿದ್ದರು ನಮ್ಮನ್ನು ಮಾತಾಡಿಸಲು. ಎಲ್ಲರನ್ನೂ ಮಾತಾಡಿಸುತ್ತಾ ಕಂದಮ್ಮನೊಂದಿಗೆ ಇದ್ದೆ, ಆದರೆ ಆಫೀಸ್ ಕರೆಯುತ್ತಲಿದೆ,ಅದಕ್ಕೆ ಹೊರಟೆ, ವಾಪಸ್,ನನ್ನ ಕುಮಾರ ಕಂಠೀರವನಿಗೊಂದು ಮುತ್ತನ್ನಿಟ್ಟು. ಬರುವೆ ಮಗನೇ ನಿನ್ನ ನೋಡಲು ಬೇಗನೇ ಎನ್ನುತ್ತಾ.

ಫೋನಾಯಣ

ಗಪ್ಪತಿ :  ಹರೇ ರಾಮ್

ಸಣ್ಣಣ್ಣ :  ಹಲ್ಲೋ ಹಲ್ಲೋ, ಯಾರ್ರಾ ಮಾತಾಡುದು ,ಕೇಳ್ತಿಲ್ಲೆ ,ಹೋಯ್,   
             ಮಾತಾಡ್ರೋ

ಗ :ಹರೇ ರಾಮ್,  ಹೋ ಭಾವೋ ನಾನೋ ಮಾರಾಯಾ ಗಪ್ಪತಿ, ಅರೇ   
     ಗುತ್ತಾಯ್ದಿಲ್ಯನಾ.

ಸ : ಗಪ್ಪತಿ ಅಂದೆ,ಇಲ್ಯಾ ಕೇಳಿದ್ದೇ ಇಲ್ಲೆ, ಸುಟ್ ಮಳೆಗಾಲದ ಕಾಲದಲ್ಲಿ  
      ಫೋನಿಗ್ ಥಂಡಿ ಮಾರಾಯಾ,ನನ್ನಾಂಗೇಯಾ , ಮೊನ್ನೆ ಬಿಸ್ಲಲ್ಲಿಟ್ಟಿದ್ದೆ,   
      ಥೋ , ಒಂದು ಲೈಟು ಹಾಕಿಡ್ತೆ ಆದ್ರು ಸರಿ   
      ವದ್ರತಿಲ್ಯಾ ನಮ್ಮನೆ ಫೋನು, ಬೇಜಾರ್ ಬಂದೋಯ್ದು ಸಾಯ್ಲಿ

ಗ : ಹೌದಕೋ ಮಾರಾಯ ,ಮೂರ್ ದಿನದಿಂದ ನಂಬ್ರ ಹೊಡಿತಿದ್ದೆ    
     ನಿಮ್ಮನೆದು,ಆದ್ರೂ ತಾಗಿದ್ದಿಲ್ಲೆ, ಹೆಚ್ಚಾಗಿ ಹಾಳಾಯ್ಕು ಅಂದಕಂಡೆ,    
     ಎಕ್ಸ್ಚೇಂಜ್ ನಲ್ಲಿ ರಿಂಗ್ ಆಗ್ತಿತ್ತನ ಹೆಚ್ಚಾಗಿ ಅಲ್ದಾ,

ಸ : ಅದ್ಯಂತದಾ ಹೊಸಾದು ಹರೆ ರಾಮ್ ಹೇಳುದು ,

ಗ : ಹೆಹೆ, ಅದಾ ನಮ್ಮ ಭಾಸ್ಕರ ಮಾಸ್ತರು ಹೇಳ್ ಕೊಟ್ಟಿರಾ,ಅದ್ಯಂತಾ    
      ಸುಟ್  ಹಲೋ ಹೇಳುದು,ಅದ್ಯಾರದ್ದೋ ಹೆಂಡ್ತಿ ಹೆಸ್ರಡಲಾ,ಸುಮ್ನೆ   
     ಯಾವಾಗ್ ನೋಡಿರೂ ಆ ಹೆಸ್ರ್ ಹೇಳುದ್ ಕಿಂತಾ ಹರೆ ರಾಮ್ ಹೇಳಿರೆ  
     ಒಂದ್ ನಮನಿ ದೇವರ ಸ್ಮರಣೆ ಮಾಡ್ದಾಂಗಾರೂ ಆಗ್ತು, ಇಂಗ್ಲೀಶ್ ಕಮ್ಮಿ   
      ಬಳಸ್ದಾಂಗೂ ಆಗ್ತು ಹೇಳಿ ಹೇಳ್ದ್ರು,ನಂಗು ಹೌದು ಅನ್ಸ್ತು

ಸ : ಹೌದಾ,ಚೊಲೋ  ಆತು ನೋಡು, ನನ್ನ ಮೊಬಾಯಿಲ್ ನಂಬ್ರ   
     ಹೊಡ್ಯವಾಗಿತ್ತಾ, ಹಿಂದಿನ ತಿಂಗಳ  ಅಷ್ಟೆ ತಗಂಡಿನಾ, ರಾಶಿ ಬಳ್ಸೂಲ್   
     ಬರ್ದೆಗಿದ್ರುವಾ ನಮ್ಮನೆ ಮಾಣಿ ಹೇಳ್ಕೊಟ್ಟಿದ್ದ,ಅಪ್ಪಯ್ಯಾ ಅಲಾರಮ 
     ಹೇಂಗ್ ಇಡವು, ಯಾರಾರೂ ಕರೆ ಮಾಡಿರೆ ಎಂತಾ ಮಾಡವು, 
     ಯಾರಿಗಾರೂ ಹೊಡುದಿದ್ರೆ ಹೇಂಗ್ ಹೊಡೆಯವು ,ಹೇಂಗ್ ಹಿಡ್ಕ 
     ಮಾತಾಡವು ಹೇಳಿ!  ಅದ್ ಸರಿ ತಾಗ್ತಿತ್ತೇನಾ

ಗ : ಇಲ್ಯಾ ,ಮೊಬೈಲ್ ನಂಬರ್ಗೂ ಮಾಡ್ದೆ,ಮೊನ್ನೆ ಶ್ರೀಕಾಂತ ಮಾವ     
      ಕೊಟ್ಟಿದ್ದ  ನಿನ್ನ ನಂಬ್ರವ, ಆದ್ರೆ ಯಾವ್ದೋ ನಾಯ್ಕರ್ತಿ " ನೀವು ಕರೆ 
      ಮಾಡಿದ ಚಂಡೆದಾರರು ವಾಯ್ಪತಿ ಬಿಟ್ಟಿಕಿ ಹೊರ್ಗ್ ಹೋಗರೆ " 
      ಅಂತು,ಚೂರು ಹೆದ್ರಿಕೆ ಆತು ,ಅದ್ಕೆ    ಬಿಟ್ ಬುಟೆ ಆ ಸುದ್ದಿಯಾ

ಸ : ಹೆಹೆ,ಅದ್ ಎಷ್ಟ್ ಸರಿ ಗುತ್ತಾತು ಮಾರಾಯ ನಿಂಗೆ ನಾಯ್ಕರ್ತಿ ಹೇಳಿ, 
      ಜೋರಿದ್ಯೋ ಭಾವಾ,

 ಗ : ಹಾಹಾ ,ಹಾಂಗ್ ಗುತ್ತಾಗ್ದೇ ಹೋಕ್ತನ, ಅಯ್ಯ ಒಂದ್ ಸೊಲ್ಲು ಹೇಳಿರೆ   
       ಸಾಕು ನಂಗೆ,ಅವ್ ಯಾವ ಜ್ಯಾತಿ ಕಂಡ್ ಹಿಡ್ದೆ ಬುಡ್ತೆ ನಾ, ಹಾಹಾ

ಸ : ಕಡೆಗೆ ಮನೆ ಬದಿಗೆಲ್ಲಾ ಆರಾಮಾ

ಗ : ಹೋ ಆರಾಮಾ, ನಂಗೇ ಬಗೆಲ್ ಕಾಲ್ ಗೆಂಟು ನೋವು ಮಾರಾಯಾ, 
      ಚಿಕನ್ ಗುನ್ಯಾ ಆಗಿದ್ದು ಮೂರ್ ವರ್ಷದ್ ಕೆಳ್ಗೆ ಇನ್ನೂ ಪೂರ್ತಿ ಗುಣ 
      ಆಯ್ದಿಲ್ಲೆ ನೋಡು, ಇಂಜೆಕ್ಶನ್ ತಗಳವ ಎಂತಾ ಕಥೆಯಾ

ಸ : ಹೌದಾ ಮಾರಾಯಾ, ಆ ರೋಗ್ ಮಹಾ ಹಾಳು ನೋಡು, ಸಾಯ್ಲಿ   
      ಮಾರಾಯ ಕಮ್ಮಿನೆ ಆಗ್ತಿಲ್ಲೆ, ನಮ್ಮಲ್ಲಿ ಎಲ್ಲ್ರಿಗೂ ಸಣ್ ಹಿಡ್ದ್ ಥಂಡಿ 
      ಮಾರಾಯ,ಮೂಸುಂಬ್ಳ ವರ್ಸೂಲೂ ಬಟ್ಟೆ ವಣ್ಗ್ತಿಲ್ಲೆ  ಈ ಮಳೆ ಕಾಲದಲ್ಲಿ , 
      ಭಾವಾ ನೀ ಒಂದ್ ಕೆಲ್ಸ ಮಾಡ,ಹೊನ್ನಾವರದ್ ಬದಿಗ್ ಬಂದ್ರೆ ಹಾಂಗೆ 
      ಕುಮಟೆಗ್ ಬಾರಾ, ನಮ್ ಟಿ ಟಿ ಹೆಗ್ಡೆರು ಚೊಲೋ ಇಂಜೆಕ್ಶನ್ ಕೊಡ್ತ್ರು
      ನೋಡು,ಸರಿ ಒಂದೆರಡ್ ತಗ, ನೀರ್ ಔಶಧಿ ಕೊಡ್ತ್ರು ,ಕುಡ್ದ್ ಬುಟ್ರೆ ಕಮ್ಮಿ 
      ಅಕ್ಕು ನೋಡು

ಗ : ಅಡ್ಡಿಲ್ಲ್ಯಾ ,ನೋಡ್ತೆ,ಆದ್ರೆ ಈಗ ಆಗ್ತಿಲ್ಯಾ ಮಾರಾಯಾ ,ಥೋ ಒಂದ್    
      ಬದಿಗ್ ನೆಗ್ಸು ಬಂದು ಭಾಸ್ಕೇರಿ ಹೊಳೆಲಿ, ಇನ್ನೊಂಡ್ ಬದಿಗ್ ಅಡ್ಕೆ 
      ಮರಕ್ಕೆ ಕೊಳೆ ಮಾರಾಯ, ಹೇಂಗ್ ಉದ್ರಿತ್ತು ಗುತ್ತಿದ್ದ 
      ಅಡ್ಕೆ,ಅದಲ್ಲಗದೇಯಾ ಮನೆ ಹಿಂದ್ ಬದಿಗೆ ಧರೆ ಬೇರೆ ಕುಸದ್ದು ಸಣ್ಕೆ, 
      ಥೋ  ನೋಡ್ರ್ ಹೊಟ್ಟೆಲಿ ಸಂಕಟ ಆಗ್ತು ಮಾರಾಯಾ, ಗೌಡ ಮೊನ್ನೆ 
      ಬತ್ತೆ  ಹೇಳಿ  ದುಡ್ ತಗಂಡಿದ್ದೇಯಾ, ಯೆಲ್ಲಿ ಸತ್ತಿನ ಗುತ್ತಿಲ್ಲೆ

ಸ : ಹೌದ,ಈಗಿನ್ ಆಳ್ ಮಕ್ಕ ಕುಲ್ ಗೆಟ್ ಹೋಯ್ದ ಮಾರಾಯಾ,ಥೋ , 
      ಪ್ಯಾಂಟ್ ಹಾಕ್ಕಂಡು ಅಂಗಡಿ ಕಟ್ಟೆ ಹೊಸೆತೋ ಬಿಟ್ರ್ ಕೆಲ್ಸಕ್ಕೆ ಬತ್ವಿಲ್ಲೆ 
      ಮಾರಾಯಾ,ಓಸಿ , ಮರ್ಕಣ್ ಚಾ, ಸಂಜೆ ಆದ್ರೆ ನಾಟಕ ,ಆಟ, ಗುಡ್ಗುಡಿ   
     ಇದೇ ಆತು ಅವಕಳ ಹಣೆಬರ

ಗ : ಕಡೆಗೋ ಭಾವಾ ಮತ್ಯಂತಾ ಸುದ್ದಿ , ನಿಮ್ಮನೆ ಆಕ್ಳು ಕರ ಹಾಕಿದ್ದಡಲಾ

ಸ : ಹೌದಾ ಮಾರಾಯ , ಒದ್ಕಲಿ ,ಥೋ, ನಂಗ ಇಪ್ಪುದ್ ಇಬ್ರೆಯಲಾ, 
      ಹಾಂಗಾಗಿ ಮನೆ ಬಿಟ್ಟಿಕ್ ಬಪ್ಪುಲೂ ಆಗ್ತಿಲ್ಲೆ ಮಾರಾಯಾ, ಒಬ್ರು ಕೋಲ್ 
      ಹಿಡ್ಕನಿಂತಕಂಬುದೆಯಾ ಇಲ್ಲೆ ಅಂದ್ರೆ ಹಾಲು ಕೊಡ್ತಿಲ್ಲೆ ಮಾರಾಯಾ 
     ,ಪರಿಸ್ಥಿತಿ ಗಂಭೀರ ಮಾರಾಯಾ, ನಮ್ಮನೆ ಮಾಣಿಗ್ ಪಾಪಾ ರಜೆನೂ 
     ಸಿಗ್ತಿಲ್ಲೆ ,ಈ ಸಲ ಚೌತಿಗೂ ಬಪ್ಪುದ್ ಕಷ್ಟ ಹೇಳ್ತಿದ್ನಪಾ

ಗ : ಹೌದು ,ಬಹಳ ಕಷ್ಟ ಮಾರಾಯ, ಇಬ್ರೇ ಇದ್ರೆ,  ನಮ್ಮನೆ ಮಾಣಿ 
      ಒಬ್ಬಂವ  ಇದ್ದಾ ,ಸಾಯ್ಲಿ ಮಾರಾಯ,ಬೇಳಗಪ್ಪುದೆ ತಡ ಶಾಲೆಗ್ 
      ಹೋಪುಲ್ ಆತು, ಸಂಜೆ ಬಂದ್ ಪಾಟೀ ಚೀಲ ಎಲ್ಲಿ ಬಿಸಾಕ್ತನ ಗುತ್ತಿಲ್ಲೆ  , 
      ಬ್ಯಾಟ್ ಹಿಡ್ಕ ಹೊರ್ಟೇ ಬುಡ್ತಾ, ಒಂದ್ ಇಷ್ಟ್ ಸಣ್ ಕೆಲ್ಸಕ್ಕೂ ಕೈಗೆ 
      ಸಿಗ್ತ್ನಿಲ್ಲೆ, ಈಗಣ್ಣ ಮಕ್ಕ ಸಾಪ್ ಕೆಟ್ಟೋಯ್ದ್ವೋ ಮಾರಾಯಾ

ಸ : ಇರ್ಲಿ ಬಿಡ ಸಣ್ಣವನಲಾ, ನೀ ಏನ್ ಕಮ್ಮಿ ಇದ್ದಿದ್ಯಾ ಸಣ್ ಕಿರಕರೆ,ಹೆಹೆ, 
      ಶತ ಪುಂಡ ಆಗಿತ್ತು ನೀನು,ಮರ್ತಿಕಿದ್ಯಾ ನೊಡ್ತೆ, ನಿನ್ನ ಆಯಿಗ್ 
      ಸಾಮ್ಮಾನಿ ತ್ರಾಸ್ ಕೊಡ್ತಿದ್ಯಾ,ಇರ್ಲಿ ಬಿಡು ,ಕಡೆಗ ಎಲೆಬಳ್ಳಿ ಕೊಡ್ತಯನ 
      ಸ್ವಲ್ಪವಾ,ಮಾರಾಯಾ ನಮ್ಮನೆ ಎಲೆ ಬಳ್ಳಿ ಎಲ್ಲಾ ಸತ್ತೋತಾ ಥೋ, 
      ಎಂತಾ ರೋಗನೋ ಯಾರ್ದೋ ಕಣ್ ಬಿತ್ತ ಗುತ್ತಿಲ್ಲೆ ಮಾರಾಯಾ

ಗ : ಬಾರಾ ಕೊಡ್ವನಾ, ನಿಂಗ್ ಕೊಡಗಿದ್ರ್ ಆಗ್ತನಾ,ನ್ನೀ ನಂಗ್ ಸಾಮ್ಮಾನಿ 
     ಹೆಲ್ಪ್ ಮಾಡಿದ್ಯಾ ,ನೀ ಇಲ್ದೆ ಗಿದ್ರ್ ನಾ ಸಂಸಾರ ಕಂಡಾಂಗೆ ಆಗಿತ್ತು 
     ಭಾವಾ

ಸ : ಸರಿಯೋ ಹಾಂಗಾರೆ ಸುಮಾರ್ ಹೊತ್ತಾತು, ನಿಂಗ್ ಬಿಲ್ ಸುಮಾರ್ 
     ಬಂದಿಕಲಿ, ಬಾರಾ ನಮ್ಮನೆಗೆ, ಈಗಿತ್ಲಾಗಿ ಬಪ್ಪುದೆ ಬಿಟ್ಟಿಕಿದ್ಯಪಾ, ಥೋ 
     ದುರ್ಬುದ್ಧಿ ಬಂದೋಯ್ದಕಾ ಮದ್ವೆ ಆದ್ ಮೇಲೆ,ಆಗೆಲ್ಲಾ ಬತ್ತಿತ್ಯಪಾ

ಗ : ಇಲ್ಯಾ ,ಬತ್ನಾ ಮಾರಾಯಾ ,ಸಂಸಾರ ತಾಪತ್ರಯನಲಾ, ಒಹ್ಹೋ 
      ಭಾವಾ,ಮರ್ತೆ ಬುಟೇ ಎಂತಕ್ ಫೋನೋ ಮಾಡಿದ್ದೆ ಹೇಳಿ, ನಾಡ್ದಿಗೆ 
      ಚೌತಿನಲಾ, ಬಾರಾ ,ಈ ವರ್ಷ ದಂಡಾವಳಿ ಪೂಜೆ ಇಟಗಂಡಿದ್ದೆ 
      ಮಾರಾಯಾ ಮಾಣೀ ಹೆಳ್ಕೆಲಿ, ಬಾರೋ ಮತೆ ಹ್ವಾ

ಸ : ಹೆಹೆ ಅಡ್ಡಿಲ್ಯೋ,ನೀ ಮಾರಾಯಾ ಸುದ್ದಿ ಹೇಳ್ ಹೇಳಿ ಎಂತಕ್ 
      ಫೋನೋ  ಮಾಡಿದ್ದು ಮರ್ತೇ ಬುಟ್ಯಲಿ, ಬತ್ನಾ, ನಿಮನೆಲಿ ಅತ್ತಿ ಹಾಲ್ 
      ಸಿಕ್ಗನಾ , ಥೋ ನಮ್ಮನೆದಕ್ಕೆ ಮುಸುರೆ ಅಂದ್ರ್ ಆಗ್ತಿಲ್ಲೆ ಮಾರಾಯ, ವಡೆ 
      ಚಕ್ಲಿಗ್ ಬೇಕಡ ಮಾರಾಯಾ,ಯಾರಾರೂ ಈ ಬದಿಗ್ ಬಪ್ಪವಿದ್ರೆ ಹನಿ 
     ಕಳ್ಸು  ನೋಡ್ವಾ

ಗ : ಅಡ್ಡಿಲ್ಯಾ, ಅಚೆ ಮನೆ ಅಣ್ಣಯ್ಯ ನಾಳೆಗ್ ಕುಮ್ಟೆಗ್ ಬಪ್ಪಂವ ಇದ್ದಾ, ಅಡ್ಕೆ  
      ಹಾಕುಲೆ, ಅವನ ಹತ್ರ ಕಳ್ಸ್ತೆ ಅಡ್ಡಿಲ್ಯಾ, ಅವಂಗೂ ಪಾಪಾ ತಂಬಳಿ ಊಟ
      ಸಿಕ್ದಾಂಗ್ ಆತು, ಇಡ್ತ್ನೋ ಭಾವಾ,ಬಾ ಮತ್ತೆ ,ಅಕ್ಕಯಂಗೂ ಬಪ್ಪುಲ್  
      ಹೇಳು

ಸ :ಅಡ್ಡಿಲ್ಯಾ ಹಾಂಗೆ ಮಾಡು, ಅಂವ ನಮ್ಮನೆಗ್ ಬಂದ್ರ್ ತೊಂದ್ರೆ ಇಲ್ಯಾ 
     ,ಒಂದ್ ಸಿದ್ಧೆ ಅಕ್ಕಿ ಜಾಸ್ಥಿ ಇಟ್ರಾತಪಾ, ಬತ್ವ ನಿಮ್ಮನೆಗೆ,ಆದ್ರೆ ಯಾರಾರೂ 
     ಒಬ್ರೇ ಬಪ್ಪುದೇಯಾ ಮಾರಾಯಾ, ಬೀಗಪ್ಪ ಬಾಗಪ್ಪಾ ಮಾಡುಲ್ 
     ಆಗ್ತಿಲ್ಯಲಾ ಕಾಲಾವಧಿ ಹಬ್ಬ ಆಗಿ ,ನಾನೇ ಬತ್ತೆ ಅಕಾ, ಬಾ ಮತೆ, ಇಡ್ತೆ 
     ಅಕಾ,ಕರೆತ ಇದ್ದು ನಮ್ಮನೆದು

ಒಂದು ಸಣ್ಣ ಕಥೆ

ಆಫೀಸಿನಿಂದ ಅವನು ಸುಸ್ಥಾಗಿ ಸಾಯಂಕಾಲ ಬಂದರೆ ಕಂಡಿದ್ದೇನು, ಅವನ ಮೂರು ಜನ ಮಕ್ಕಳು ಮನೆಯಂಗಳದಲ್ಲಿ ಕೆಸರಾಟ ಆಡುತ್ತಿದ್ದಾರೆ, ಓದು ಬರಹದ ಪರಿವೆಯೆ ಇಲ್ಲದೆ.ಗಾರ್ಡನ್ನಿನಲ್ಲಿ ಅವರ ಬಟ್ಟೇ ದಿಕ್ಕಾಪಾಲಾಗಿ ಬಿದ್ದಿದೆ,ಹಿರಿಯವನ ಸೈಕಲ್ ಗಟಾರದಲ್ಲಿ, ಅವನ ಕಾರಿನ ಡೋರ್ ಓಪನ್ ಆಗಿದೆ ! ನಾಯಿಯ ಪತ್ತೆ ಇಲ್ಲಾ, ಇವನ ಸುಸ್ಥು ಜಾಸ್ಥಿ ಆಗಿತ್ತು ಆಗ. ಹಾಗೆನೆ ನೋಡಿದರೆ ಮನೆಯ ಹೆಬ್ಬಾಗಿಲು ಮುಚ್ಚಿಲ್ಲ ,ಕಳ್ಳರನ್ನ ಕರೆಯುತ್ತಾ ಇದೆ. ಛೇ ಏನಿದು ಅವಸ್ಥೆ ಎಂದು ಮನೆಯ ಒಳಗೆ ಬಂದರೆ ಇನ್ನು ಅಧ್ವಾನ, ಮೂರ್ಛೆ ಹೋಗುವುದೊಂದೆ ಬಾಕಿ, ದಿಕ್ಕಾಪಾಲಾಗಿ ಬಿದ್ದಿರುವ ಆಟಿಗೆ ಸಾಮಾನುಗಳು,ಮಕ್ಕಳ ಬಟ್ಟೆಗಳು, ಪುಸ್ಥಕಗಳು. ದೊಡ್ಡ ಶಬ್ದದೊಂದಿಗೆ ಪ್ರೇಕ್ಷಕರಿಲ್ಲದೆ ಇದ್ದರೂ ಅರಚುತ್ತಿರುವ ಕಾರ್ಟೂನ್ ಚಾನೆಲ್ . ಮನಸ್ಸಿನಲ್ಲೇ "ಛೆ ಇಷ್ಟೆಲ್ಲಾ ಆದ್ರು ಇವಳೆಲ್ಲಿ ಹಾಳಾಗೋದ್ಲು " ಅಂತ ಬಯ್ದುಕೊಳ್ಳುತ್ತಾ ,ಶೂ ಬಿಚ್ಚುವ ವ್ಯವಧಾನವೂ ಇಲ್ಲದೆ ಅಡಿಗೆ ಮನೆಗೆ ಹೋದನು. ಅಡಿಗೆ ಮನೆಯಲ್ಲಿ ಅವನನ್ನ ಸ್ವಾಗತಿಸಿದ್ದು ಎಲ್ಲಾ ಕಡೆ ಹರಡಿರುವ ಗೋಧಿ ಹಿಟ್ಟು, ಹಾರಾಡುತ್ತಿರುವ ಚಾಕಲೇಟ್ ಮೇಲಿನ ಪ್ಲಾಸ್ಟಿಕ್,ಬಾಗಿಲು ತೆರೆದು ನಗುತ್ತಿರುವ ಫ್ರಿಡ್ಜು. ಆದ್ರೆ ಅಲ್ಲಿಯೂ ಕಾಣ್ಸಿಲ್ಲ ಮನೆಯವಳು. ಹಾಗೆ ಹೊರಗೆ ಬಂದ್ರು ಟಿ ವಿ ಆರ್ಸಿದ್ರೆ ಒಳಗಿನ ಬಚ್ಚಲು ಮನೆಯಿಂದ ಸಣ್ಣಗೆ ನೀರು ಬೀಳುವ ಶಬ್ದ ,ನೋಡಿದ್ರೆ ಬಾಗಿಲು ತೆರೆದೇ ಇದೆ! ಒಳ ಹೊಕ್ಕವನು ಜಾರಿ ಬೀಳದೇ ಇದ್ದಿದ್ದು ಆಶ್ಚರ್ಯ,ಡ್ರೇನ್ ನ್ನು ಬಟ್ಟೆ ಯಿಂದ ತುರುಕಿ, ಪೇಸ್ಟನ್ನ ಚೆಲ್ಲಿ ಸಣ್ಣ ಸಮುದ್ರವೇ ಇತ್ತು ಅಲ್ಲಿ. ಟ್ಯಾಪ್ ಬಂದ್ ಮಾಡಿ ಮಕ್ಕಳ ರೂಮಿ ಗೆ ಹೋಗುವಾಗ ಇಣುಕಿದರೆ ದೇವರ ಮನೆಯಲ್ಲು ಕಾಣಲಿಲ್ಲ ಮನೆಯವಳು. ಎಲ್ಲಿ ಸತ್ತಳು ಇವಳು ಎನ್ನುತ್ತ ಮಕ್ಕಳ ರೂಮಿಗೆ ಹೋದರೆ ಅಲ್ಲಿಯ ಪರಿಸ್ಥಿತಿ ದೇವರಿಗೆ ಪ್ರೀತಿ. ಸಿಟ್ಟು ಸಿಕ್ಕಾಪಟ್ಟೆ ಬರ್ತಾ ಇದ್ರುನು ಏನೊ ಒಂದು ತರಹದ ಘಾಬರಿ ಏನಾಯ್ತು ಇವಳಿಗೆ,ಎಲ್ಲಿಗ್ ಹೋಗಿರಬಹುದು ಎಂದು. ಮಹಡಿಯ ತನ್ನ ರೂಮನ್ನ ನೋಡಲು ಬೇಗ ಬೇಗ ಉಸಿರು ಬಿಡುತ್ತಾ ಹತ್ತಿದವ ರೂಮಿಗೆ ಹೋದರೆ
.
.
.
.
.
.
.
ಸ್ವಾಗತಿಸಿದ್ದು ಸುಶ್ರ್ಯಾವ್ಯದ ಪಂ . ಹಾಸಣಗಿ ಗಣಪತಿ ಭಟ್ಟರ ರಾಗ ಮಾಲಕೌನ್ಸ್ ,ಏ ಸಿ ಯ ಕ್ರಪೆಯಿಂದ ತಣ್ಣನೆಯ ಗಾಳಿ, ಹೆಂಡತಿ ಯೆಂಬವಳು ಎರಡು ದಿಂಬನ್ನಿಟ್ಟು ಆರಾಮಾಗಿ ಕಾಲು ನೀಡಿ ಕಾದಂಬರಿ ಓದ್ತಾ ಇದ್ದಳು !!!!!!!!!!!!!!!! , ಇವನ ನೆತ್ತಿಗೆ ಪಿತ್ಥ ಏರಿದ್ದೇ " ಏನಿದು,ಮನೆಯೋ ಗೋಡೊವ್ನೋ ? ಇದೇನಾ ಮನೆ ನೋಡ್ಕೊಳೊ ರೀತಿ, ಛೆ,ಮನೆಯಲ್ಲಿದ್ದು ಏನ್ ಮಾಡ್ತೀಯಾ, ನಾನ್ ನೋಡಿದ್ರೆ ಹಗಲು ರಾತ್ರಿ ದುಡಿತಿನಿ " ಅಂದ. ಹೆಂಡತಿ ಶಾಂತವಾಗಿ ಕಿರು ನಗೆ ಯೊಂದಿಗೆ " ನೋಡಿದ್ರಾ,ನೀವೆ ಕೇಳ್ತಾ ಇದ್ರಿ ಮೊದಲು, ಮೂರ್ ಹೊತ್ತೂ ಮನೆಯಲ್ಲಿದ್ದು ಏನ್ ಮಾಡ್ತಿಯಾ ಅಂತ, ಇವತ್ತು ಏನೂ ಮಾಡಿಲ್ಲ,ಅದಿಕ್ಕೆ ಹಿಂಗೆ"


: inspiration from an email

Tuesday, September 11, 2012

ಬದುಕು



ಬದುಕು ಮಾಯೆಯ ಮಾಟ ಯಾರ್ದಪ್ಪಾ ಈ ಆಟ
ತೋಟದ ಕೆಲ್ಸಕ್ ಜನ ಇಲ್ಲೆ, ಹಾಳಾಗ್ತ್ರೋ ತೋಟ
ಹೀಂಗೆ ಆದರೆ ಮುಂದೆ ಉಂಬುದ್ ಹೆಂಗೆ 

ಆಳಿಗೆ ಆಸ್ರಿ ಕೊಟ್ಟು ತೋಟದಲ್ಲೇ ಮಜ್ಜಿಗೆ ಕೊಟ್ಟು
ಬಪ್ಪಲಿವರೆಗೆ ಅವಂಗೆ ಊಟಕಾಗ್ತು
ಕೆಲ್ಸ ಎಂತು ಆಗ್ತಿಲ್ಲೆ ಆಳ್ ಲೆಕ್ಕ ಹೆಚ್ಚಾಗ್ತು
ನಾ ಮಾಡಿದ ಖರ್ಮ ಕೇಳವರ್ಯಾರು

ಕೊಳೆ ಮದ್ದು ತುಟ್ಟಿ ಆಯ್ದು ದಿನಸಿ ಅಂಗಡಿಲಿ ಕೈ ಸುಡ್ತು
ಹಬ್ಬ ಬಂದ್ರೆ ಸಾಕು ಬಯ್ಕಂಬ್ದೇಯಾ
ತರಕಾರಿ ತಿಂಬುದ್ ಬಿಡುದೆ , ಹಣ್ಣಂತು ವಿಷ ಅನ್ಸ್ತು
ಅನ್ನ ಕೊಡುವ ನಮಗೆ ಗತಿ ಇಲ್ಲಾ

ನಂಗಂತು ವಯಸ್ಸಾತು ಬೆನ್ ಗೂನು ಬಗ್ಗೋಯ್ದು
ಮನೆಯವಳು ಕೆಮ್ಮಿದರೆ ರಕ್ತ ಬತ್ತು
ದುಡ್ದೆಲ್ಲಾ ಕೊಟಿಗೆಗೆ, ಉಳಿದದ್ದು ಡಾಕ್ಟ್ರಿಗೆ
ಚಿನ್ನ ಮುಟ್ಟುಲಾಗ್ತಿಲ್ಲೆ ಕೈ ಸುಡ್ತು

ಮಾಣಿಗೆ ಮದ್ವೆ ಇಲ್ಲೆ, ಕೂಸೊಂದು ಸಿಗ್ತಿಲ್ಲೆ
ನಂಗ ಮುದಕರಾದುರೂನು ಮೊಮ್ಮಕ್ಕ ಇಲ್ಲೆ
ನಮ್ ಊರಲ್ಲಿ ಸಮ ಇಲ್ಲೆ ಒಬನ್ ಕಂಡ್ರ್ ಇನ್ನೊಬ್ಬಂಗ್ ಆಗ್ತಿಲ್ಲೆ.
ಏನು ಮಾಡುದು ಶಿವನೇ ಕರ್ಕತ್ತಿಲ್ಯಾ

ಕೂಸಂತು ಓಡೋಯ್ದು, ಎಲ್ಲಿದ್ದ ಗುತ್ತಿಲ್ಲೆ
ಅಳಿ ಮಾಣಿ ಯೆಂತ ತಿಂಬವ್ನೋ ಯಾವ ಜಾತಿಯೋ
ಪಕ್ಕದ್ ಮನೆ ಸುಬ್ಬಕ್ಕಂಗೆ ನೆಗ್ಯಾಡುದೆ ಕೆಲ್ಸ
ನಮ್ಮನೆ ಪ್ರಾಣಿಯ ಗೋಳು ತಡೆಯುದ್ ಹೆಂಗೆ

ಬ್ರೋಕರ್ ಶೆಟ್ಟಿ ಸತ್ತೋಗ್ಲಿ ದುಡ್ ತಗಂಡು ಕೈ ಕೊಟ್ಟಾ
ಮೂಗಿಗೆ ತುಪ್ಪ ವರಸಿ ಊರು ಬಿಟ್ಟಾ
ನಂಗಂತು ಮಗ ಇದ್ದ ನಾಲ್ಕ್ ಕಾಳು ಅಕ್ಕಿ ಹಾಕಗು
ಅವನ ಮುಂದಿನ ದಿನ ನೆನೆದ್ರೆ ಜೀವ ಹಾರ್ತು

Monday, September 10, 2012

ವನಮಹೊತ್ಸವ

ನಮ್ಮೂರಲ್ಲೂ ನಡೆದಿತ್ತು ಹೋದ ವರ್ಷ ವನಮಹೊತ್ಸವ
ಬಂದಿದ್ದರು ಮಂತ್ರಿ ಮಾಗಧರು ಬೀರುತ್ತ ಕಳ್ಳ ನಗುವ
ನೆಟ್ಟರು ಗಿಡಗಳ ತುಂಬಿದರು ಹೊಂಡವ,ಬಿಗಿದರು ಭಾಷಣವ
ಈ ಸಲವೂ ನಡೆಯುತ್ತಿದೆ ಆದರೆ ತುಂಬುವರು ಅದೇ ಹೊಂಡವ !